Home Karnataka State Politics Updates ಜಾತಿವಾದಿಗಳು ಜಾತಿ ಸಂಘಕ್ಕೆ ಸಚಿವರಾಗಲಿ | ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು- ಹಾಲಾಡಿ

ಜಾತಿವಾದಿಗಳು ಜಾತಿ ಸಂಘಕ್ಕೆ ಸಚಿವರಾಗಲಿ | ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು- ಹಾಲಾಡಿ

ಜಾತಿ ಹೆಸರಿನಲ್ಲಿ ಸಚಿವ ಸ್ಥಾನ ಕೇಳುವವರು ಜಾತಿ ಸಂಘಕ್ಕೆ ಸಚಿವರಾಗಲಿ ಎಂದು ಉಡುಪಿ ಜಿಲ್ಲೆಯ ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದ್ದಾರೆ.

ಸಚಿವ ಸ್ಥಾನವನ್ನು ನಾನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಉಸಿರು ಇರೋತನಕ ನಾನು ಬೆಂಗಳೂರಿಗೆ ಹೋಗಿ ಸಚಿವ ಸ್ಥಾನ ಕೇಳಲ್ಲ. ಯಾರ ಕಾಲಿಗೂ ಬೀಳಲ್ಲ ಎಂದರು.

ಯಾವ ನಾಯಕನ ಹಿಂದೆಯೂ ತಿರುಗಾಡಲು ಹೋಗಲ್ಲ. ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ.ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ. ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಈಗಲೂ ಕೇಳಲು ಹೋಗಲ್ಲ ಎಂದರು.

ರಾಜಕೀಯ ಲಾಬಿ, ಜಾತಿವಾದಿತನ ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಶ್ರದ್ಧೆಯಿಂದ ಮಾಡುತ್ತೇನೆ. ಶಾಸಕನಾಗಿ ಜನ ಸೇವೆಯನ್ನು ಐದು ಅವಧಿಯಲ್ಲೂ ಮಾಡುತ್ತಿದ್ದೇನೆ ಎಂದು ಹಾಲಾಡಿ ಹೇಳಿದರು.

ನಾನು ಮಂತ್ರಿಯಾದರೆ ಸರ್ಕಾರಿ ಕಾರು, ಎಸ್ಕಾರ್ಟ್, ಗನ್ ಮ್ಯಾನ್ ತೆಗೆದುಕೊಳ್ಳುವುದಿಲ್ಲ. ನಾನು ಜನರ ಜೊತೆ ಕೆಲಸ ಮಾಡುವವನು ನನಗೆ ಯಾವ ಜೀವ ಭಯವಿಲ್ಲ. ಜೀವ ಭಯ ಇದ್ದವರು ಜನಸೇವೆ ಮಾಡಲು ಸಾಧ್ಯವಿಲ್ಲ.

ನನಗೆ ಈವರೆಗೆ ಯಾರಿಂದಲೂ ಯಾವುದೇ ಕರೆಗಳು ಮಾಹಿತಿಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ಧನಿದ್ದೇನೆ ಎಂದರು. ನಾನು ದೊಡ್ಡ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು ಎಂದರು.

ಕೇಳಿ ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ. ಶ್ವಾಸ ಇದ್ದರೆ ಸಚಿವ ಸ್ಥಾನ ಕೇಳಲು ಹೋಗಲ್ಲ. ನಾನು ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘರ್ಷಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ಧಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು

ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು. ನನ್ನ ಮಾತುಗಳನ್ನು ನೀವು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿಕೊಳ್ಳಬಹುದು. ವಿಶ್ಲೇಷಣೆ ಮಾಡಲು ಮಾಧ್ಯಮಗಳಿಗೆ ಹಕ್ಕು ಇದೆ ಎಂದರು.

ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನ ಕೊಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿ ಒಮ್ಮೆ ಮೋಸ ಮಾಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ಕೊಡುವ ಬದಲು ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಿತ್ತು. ಆ ಬೇಸರದಿಂದ ಪಕ್ಷೇತರರಾಗಿ ಹಾಲಾಡಿ ಸ್ಪರ್ಧೆ ಮಾಡಿ ಸುಮಾರು 40,611 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಿ.ಎಸ್ ಯಡಿಯೂರಪ್ಪ ಮತ್ತು ಟೀಂ ಸಂಧಾನ ಮಾಡಿ ಹಾಲಾಡಿ ತಣ್ಣಗಾಗಿದ್ದರು. ಪಕ್ಷೇತರರಾಗಿ ಗೆದ್ದ ನಂತರ ಐದು ವರ್ಷದ ಅವಧಿಯ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು.