Congress Guarantees: : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಡಿಯಲ್ಲಿ (Congress Guarantees ) ಜಾರಿಗೊಳಿಸಿರುವ ‘ಗೃಹಲಕ್ಷ್ಮಿ’ ಹಾಗೂ ‘ಶಕ್ತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತದೆ. ಮಹಿಳಾ ಸಬಲೀಕರಣಕ್ಕಾಗಿ ಜಾರಿಯಾಗಿರೋ ಈ ಯೋಜನೆಗಳು ನಾರಿಯರಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಆದರೀಗ ಈ ಯೋಜನೆಗಳನ್ನು ರಾಜ್ಯದಲ್ಲಿ ಪುರುಷರಿಗೂ ವಿಸ್ತರಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಇದು ಹೋರಾಟದ ಸ್ವರೂಪ ಪಡೆದಿದೆ.
ಹೌದು, ಕನ್ನಡ, ಕರ್ನಾಟಕ ಅಥವಾ ಕನ್ನಡಿಗರಿಗೆ ಏನಾದರೂ ಸಮಸ್ಯೆ ಎದರಾದಾಗ ಯಾರು ಬೀದಿಗಿಳಿದು ಪ್ರತಿಭಟಿಸೋ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಅವರು ರಾಜ್ಯ ಸರ್ಕಾರದೆದುರು ಈ ರೀತಿಯ ಮಹತ್ವದ ಬೇಡಿಕೆಯೊಂದನ್ನು ಇಟ್ಟು ಬೆಂಗಳೂರಿನಲ್ಲಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದ ಸರ್ಕಾರದ ಗ್ಯಾರಂಟಿಗಳು ಪರುಷರಿಗೂ ಸಿಗಲಿ ಎಂದು ಮೆಜೆಸ್ಟಿಕ್ನಲ್ಲಿ ಟಿಕೆಟ್ ಇಲ್ಲದೇ ಬಿಬಿಎಂಪಿ ಬಸ್ ಹತ್ತುವ ಮೂಲಕ ವಿನೂತನವಾಗಿ ಪ್ರತಿಭಟನೆಗಿಳಿದ ವಾಟಾಳ್ ಅವರು ಕೊನೆಗೆ ಪೋಲೀಸರ ವಶವೂ ಆಗಿದ್ದಾರೆ.

ತಮ್ಮ ಪ್ರತಿಭಟನೆಯ ಬಗ್ಗೆ ಮಾತನಾಡಿದ ವಾಟಾಳ್ ಅವರು ರಾಜ್ಯ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ನೀಡಿರುವುದು ತುಂಬಾ ಸ್ವಾಗತಾರ್ಹ. ಇದನ್ನು ನಾನು ಶ್ಲಾಘಿಸುತ್ತೇನೆ. ಆದರೆ ಮಹಿಳೆಯರಿಗೆ ಈ ಯೋಜನೆಗಳಡಿಯಲ್ಲಿ ಪ್ರತಿ ತಿಂಗಳು 2000 ಹಣ ಸಿಗುತ್ತದೆ. ಉಚಿತವಾಗಿ ಬಸ್ ಪ್ರಯಾಣವನ್ನು ಮಾಡುತ್ತಾರೆ. ಎಲ್ಲವೂ ಕೂಡ ಅನುಕೂಲಕರವಾಗಿದೆ. ಆದರೆ ಪುರುಷರಿಗೆ ಯಾವುದು ಇಲ್ಲ. ಪುರುಷರು ಏನು ಅನ್ಯಾಯ ಮಾಡಿದ್ದಾರೆ. ಈ ಎರಡು ಯೋಜನೆಗಳು ಪುರುಷರಿಗೂ ಕೂಡ ವಿಸ್ತಾರಗೊಳ್ಳಬೇಕು ಎಂದರು.
ಅಲ್ಲದೆ ಗಂಡಸರಿಗೆ ನೀವು ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಅವರಿಗೂ ಕೂಡ ಸಮಾನವಾದಂತಹ ಸೌಕರ್ಯಗಳನ್ನು ಕಲ್ಪಿಸಿ. ಮಹಿಳೆಯರು, ಗಂಡಸರು ಇಬ್ಬರು ಕೂಡ ಸಮಾನರು ಹಾಗಾಗಿ ಇಬ್ಬರಿಗೂ ಕೂಡ ಸಮಾನ ರೀತಿಯ ಯೋಜನೆಗಳು ಜಾರಿಯಾಗಬೇಕು. ಬಸ್ಸಿನಲ್ಲಿ ಪುರುಷರು ಕೂಡ ಪ್ರಯಾಣ ಮಾಡುತ್ತಾರೆ ಹಾಗಾಗಿ ಅವರಿಗೂ ಕೂಡ ಉಚಿತವಾದಂತಹ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ ಎಂದು ವಿನೂತನವಾಗಿ ಪ್ರತಿಭಟಿಸಿದರು.
