KH Muniyappa: ಬಿಪಿಎಲ್ ಕಾರ್ಡ್ ಗೆ(BPL card) ಸಂಬಂಧಿಸಿದಂತೆ ಮಹತ್ವದ ಮಾಹಿತಿವೊಂದನ್ನು ರಾಜ್ಯ ಸರ್ಕಾರ ನೀಡಿದೆ. ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ(KH Muniyappa) ಶುಕ್ರವಾರದಂದು ಘೋಷಣೆ ಮಾಡಿದ್ದಾರೆ.
ಜೀವನಾಧಾರಕ್ಕಾಗಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು (ಯಲ್ಲೋ ಬೋರ್ಡ್) ಹೊಂದಿದ್ದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದಿಲ್ಲ. ಸ್ವಂತ ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಆಹಾರ ಸಚಿವ ಕೆ ಮುನಿಯಪ್ಪ ತಿಳಿಸಿದ್ದಾರೆ. ಯಲ್ಲೋ ಬೋರ್ಡ್ ವಾಹನವಿದ್ದ ಕಾರಣಕ್ಕೆ ರದ್ದಾಗಿರುವ ಬಿಪಿಎಲ್ ಗಳನ್ನು ಮರು ವಿತರಣೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ನಿಂದ ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿ ಪೈಕಿ, ಅನ್ನಭಾಗ್ಯ (AnnaBhagya ) ಯೋಜನೆಯಡಿಯಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆ.ಜಿ ಅಕ್ಕಿ ಸೇರಿ 10 ಕೆ.ಜಿ ಅಕ್ಕಿಯನ್ನು ವಿತರಿಸುವುದಾಗಿ ಹೇಳಿತ್ತು. ಅಕ್ಕಿ ಕೊರತೆಯ ಕಾರಣ ಪಡಿತರದಾರರ ಖಾತೆಗೆ ಹಣವನ್ನು ಜಮಾ ಮಾಡಲಾಗಿತ್ತು. ಆದರೆ, ಹೆಚ್ಚು ದಿನ ಹಣ ನೀಡಲು ಆಗುವುದಿಲ್ಲ. ಆದ್ದರಿಂದ ಸೆಪ್ಟೆಂಬರ್ನಿಂದಲೇ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಯುತ್ತಿದೆ. ಅಕ್ಕಿ ಸಿಗದಿದ್ದರೆ ದುಡ್ಡು ಹಾಕುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ಹೊಸದಾಗಿ ಪಡಿತರ ಕಾರ್ಡ್(ration Card) ವಿತರಣೆಗೆ ಸೂಚನೆ ನೀಡಲಾಗಿದೆ. ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರ ಕಾರ್ಡ್ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇದನ್ನೂ ಓದಿ: ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆಗೆ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಒತ್ತಾಯ
