Aziz Qureshi Controversy: ಮಧ್ಯಪ್ರದೇಶದ (Madhya Pradesh) ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ (Aziz Qureshi) ಅವರು ಒಂದೆರಡು ಕೋಟಿ ಮುಸ್ಲಿಮರು ಸತ್ತರೆ ತೊಂದರೆಯಿಲ್ಲ ಎಂದು ವಿವಾದಾತ್ಮಕ (Aziz Qureshi Controversy) ಹೇಳಿಕೆ ನೀಡಿದ್ದು, ಭಾರೀ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ಅಜೀಜ್ ಖುರೇಷಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ಜನ್ಮದಿನೋತ್ಸವದ ಸಲುವಾಗಿ ವಿದಿಶಾದಲ್ಲಿ ನೆರೆದಿದ್ದ ಕಾಂಗ್ರೆಸ್ನ ಮುಸ್ಲಿಂ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಮುಸ್ಲಿಮರನ್ನು ಗುಲಾಮರಂತೆ ನೋಡಲಾಗುತ್ತಿದೆ. ಕಾಂಗ್ರೆಸ್ ಹಿಂದುತ್ವದ ಆಟ ಆಡುತ್ತಿದೆ ಎಂದು ಆರೋಪಿಸಿರುವ ಅಜೀಜ್, “ಅವರ ಆದೇಶಗಳಿಗೆ ಅನುಗುಣವಾಗಿ ಕುಣಿಯಲು ಮುಸ್ಲಿಮರು ಗುಲಾಮರಲ್ಲ” ಎಂದು ಎಚ್ಚರಿಕೆ ನೀಡುವ ಮೂಲಕ ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
“ಮುಸ್ಲಿಮರು ಗುಲಾಮರಲ್ಲ ಎಂಬುದನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಅರ್ಥಮಾಡಿಕೊಳ್ಳಬೇಕು. ಪೊಲೀಸ್, ರಕ್ಷಣಾ ಪಡೆಗಳು ಮತ್ತು ಬ್ಯಾಂಕುಗಳಲ್ಲಿ ಅವರಿಗೆ ಯಾವುದೇ ಕೆಲಸ ಇಲ್ಲ ಎಂದರೆ ನಿಮಗೆ ಏಕೆ ಮತ ಹಾಕಬೇಕು? ಅವರಿಗೆ ಬ್ಯಾಂಕ್ ಸಾಲ ಸಿಗುವುದು ಭರವಸೆ ಇಲ್ಲ ಎಂದಾಗ ನಿಮಗೆ ಏಕೆ ಅವರು ಮತ ಹಾಕಬೇಕು?” ಎಂದು ಖಡಕ್ ಪ್ರಶ್ನೆ ಎತ್ತಿದ್ದಾರೆ.
“ಮುಸ್ಲಿಮರ ಅಂಗಡಿಗಳು, ಪ್ರಾರ್ಥನಾ ಸ್ಥಳಗಳು ಮತ್ತು ಮನೆಗಳನ್ನು ಸುಟ್ಟು ಹಾಕಲಾಗುತ್ತಿದೆ. ಅವರ ಮಕ್ಕಳು ಅನಾಥರಾಗುತ್ತಿದ್ದಾರೆ. ಅವರು ಹೇಡಿಗಳಲ್ಲ ಸಹಿಸಿಕೊಳ್ಳುತ್ತಾರೆ. ಆದರೆ, ಇದು ಮಿತಿಯನ್ನು ಮೀರಿದರೆ, 22 ಕೋಟಿ ಮುಸ್ಲಿಮರಲ್ಲಿ ಒಂದು ಅಥವಾ ಎರಡು ಕೋಟಿ ಜನರು ತಮ್ಮ ಜೀವ ಕಳೆದುಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಅವರು ಈಗ ‘ಜೈ ಗಂಗಾ ಮಾಯಾ’, ‘ಜೈ ನರ್ಮದಾ ಮಾಯಾ’, ‘ಗರ್ವದಿಂದ ಹೇಳು ಹಿಂದೂ ಎಂದೂ’ ಎಂಬ ಘೋಷಣೆ ಕೂಗುತ್ತಿದ್ದಾರೆ. ಧಾರ್ಮಿಕ ಯಾತ್ರೆಗಳನ್ನು ನಡೆಸುತ್ತಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಮೆಗಳನ್ನು ಸ್ಥಾಪಿಸುತ್ತಿದ್ದಾರೆ. ಇದು ನಾಚಿಕೆಗೇಡು. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ ಎಂಬ ಹೆದರಿಕೆ ನನಗಿಲ್ಲ” ಎಂದು ಕಾಂಗ್ರೆಸ್ ನಾಯಕರು ಈಗ ಹಿಂದುತ್ವದ ಮಂತ್ರ ಜಪಿಸುತ್ತಿರುವ ಬಗ್ಗೆ ಆರೋಪಿಸಿದ್ದಾರೆ.
