KN rajanna: ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ವಿಸರ್ಜನೆಯಾಗುತ್ತಾ..ಹಾಗೊಂದು ವಿಚಾರ ರಾಜಕೀಯ ಪಡಸಾಲೆಯಲ್ಲಿ ಬಹು ಚರ್ಚಿತ ವಿಷಯವಾಗಿದೆ.
ಇದರ ನಡುವೆ ಸಹಕಾರ ಸಚಿವ ರಾಜಣ್ಣ( KN rajanna) ಅವರ ಹೇಳಿಕೆ ಮಹತ್ವ ಪಡೆದಿದೆ.ರಾಜಣ್ಣ ಅವರು ಹೇಳಿಕೆ ನೀಡಿ, ಲೋಕಸಭೆ ಚುನಾವಣೆಯ ಬಳಿಕ ಕೆಲವೊಮ್ಮೆ ರಾಜ್ಯ ಸರಕಾರವೇ ವಿಸರ್ಜನೆ ಆಗುತ್ತದೆ. ನಮ್ಮಲ್ಲೂ ಹೀಗೆ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರವನ್ನು ವಿಸರ್ಜನೆ ಮಾಡಿದ ಉದಾಹರಣೆ ಇದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿ, ರಾಮಕೃಷ್ಣ ಹೆಗಡೆ ಕಾಲದಲ್ಲೆಲ್ಲ ಹೀಗಾಗಿದೆ. ಈಗಲೂ ಹಾಗೆ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಎಂದು ಹೇಳಿಕೆ ನೀಡಿದರು.
ಮುಂಬರುವ ಲೋಕಸಭೆ ಚುನಾವಣೆಯು ರಾಜ್ಯ, ದೇಶ ಮತ್ತು ಈಗಿನ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮಹತ್ವದ್ದು. ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗೆದ್ದರೆ ಬಿಜೆಪಿಯವರು ಜನರ ಜನಾದೇಶವನ್ನು ಕಳೆದುಕೊಂಡಿದ್ದಕ್ಕಾಗಿ ನಮಗೆ ರಾಜೀನಾಮೆ ನೀಡುವಂತೆ ಘೋಷಣೆಗಳೊಂದಿಗೆ ಬರುತ್ತಾರೆ ಎಂದರು.
ಇನ್ನೂ ಮೂರು ಡಿಸಿಎಂ ಹುದ್ದೆಗಳು ಬೇಕು ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ. 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ಪ್ರಸ್ತಾಪಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಇದು ಯಾರ ಪ್ರಚೋದನೆಯನ್ನೂ ಆಧರಿಸಿಲ್ಲ ಎಂದು ಹೇಳಿದ್ದಾರೆ.
ನಾವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಅವಶ್ಯಕತೆಯಿದೆ, ಅದಕ್ಕಾಗಿ ನಾನು ಇನ್ನೂ ಮೂರು ಡಿಸಿಎಂಗಳ ಯೋಚನೆಯನ್ನು ಹಂಚಿಕೊಂಡಿದ್ದೇನೆ” ಎಂದಿದ್ದಾರೆ. ಹೈಕಮಾಂಡ್ಗೆ ಸರಿ ಎನಿಸಿದರೆ ಅನುಷ್ಠಾನ ಮಾಡುತ್ತದೆ, ಸರಿಯಿಲ್ಲ ಎಂದಾದರೆ ಬಿಡುತ್ತದೆ, ಅದರಲ್ಲಿ ತಪ್ಪೇನಿಲ್ಲ ಎಂದು ರಾಜಣ್ಣ ಹೇಳಿದರು.
