DK Shivkumar : ಕರ್ನಾಟಕದಲ್ಲಿ (Karnataka) ಸಿಎಂ ಕುರ್ಚಿ ಚರ್ಚೆ ಜೀವಂತವಿದೆ. ಹೈಕಮಾಂಡ ಹೇಳಿದಂತೆ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar)ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದರೂ ಸಹ ಈ ಬೆಳವಣಿಗೆ ಯಾವ ವಿರಾಮವೂ ಬಿದ್ದಿಲ್ಲ. ಸ್ವತಃ ಡಿಕೆಶಿ ಹೊರಗೆ ಎಲ್ಲೂ ಗೊಂದಲಗಳಿಲ್ಲ ಎನ್ನುತ್ತಿದ್ದರೂ ಒಳಗೊಳಗೇ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ.
ಪಕ್ಷದ ನಿಷ್ಠಾವಂತ, ಹಣಕಾಸಿನ ವಿಚಾರದಲ್ಲೂ ಪಕ್ಷಕ್ಕೆ ಯಾವತ್ತೂ ಆಗಿ ಬರುವ ನಾಯಕನಾದರೂ ಡಿಕೆ ಶಿವಕುಮಾರ್ ಒತ್ತಡಕ್ಕೆ ರಾಹುಲ್ ಗಾಂಧಿ ಮಣಿಯದೇ ಇರಲೂ ಕಾರಣವಿದೆ ಎನ್ನಲಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವಾಗಲೇ ರಾಹುಲ್ ಗಾಂಧಿ ವಿವಿಧ ಮೂಲಗಳಿಂದ ರಹಸ್ಯ ವರದಿ ತರಿಸಿಕೊಂಡಿದ್ದಾರೆ. ಈ ವರದಿಯ ಅನ್ವಯ ಈಗ ನಾಯಕತ್ವ ಬದಲಾವಣೆ ಮಾಡಿದರೆ ಸರ್ಕಾರಕ್ಕೆ ಅಪಾಯ ಎಂದೇ ಫಲಿತಾಂಶ ಬಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸದ್ಯಕ್ಕೆ ಯಾವುದೇ ಒತ್ತಡ ಬಂದರೂ ಬದಲಾವಣೆ ಮಾಡದೇ ಇರಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕ ಪಿ.ಚಿದರಂಬರಂ, ಚುನಾವಣಾ ತಂತ್ರಗಾರ ಸುನೀಲ್ ಕುನಗೋಳು ಸೇರಿದಂತೆ ವಿವಿಧ ಕಡೆಯಿಂದ ರಾಹುಲ್ ಗಾಂಧಿ ವರದಿಯನ್ನು ತರಿಸಿಕೊಂಡಿದ್ದಾರೆ. ಎಲ್ಲಾ ವರದಿಗಳು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಲು ಇದು ಸಕಾಲವಲ್ಲ ಎಂಬ ಅಂಶವನ್ನೇ ಶಿಫಾರಸು ಮಾಡಿವೆ. ಆದ್ದರಿಂದಲೇ ಡಿ.ಕೆ.ಶಿವಕುಮಾರ್ ಕಡೆಯಿಂದ ಎಷ್ಟು ಒತ್ತಡಗಳು ಬಂದರೂ ಸಹ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆ ಚರ್ಚೆಗೆ ಅಲ್ಪ ವಿರಾಮವನ್ನು ಕೊಟ್ಟಿದ್ದಾರೆ.
