Dakshina kannada:ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರ ನಿವಾಸಿ ದಲಿತ ಬಾಲಕ ಶ್ರೀಜಿತ್ (17) ಸಾವನ್ನಪ್ಪಿದ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದ್ದು, ಇಂದು ದಲಿತ್ ಸೇವಾ ಸಮಿತಿ ಹಾಗೂ ದಲಿತ ಸಂಘಟನೆಗಳ ಸದಸ್ಯರು ಸೇರಿ ಸೂಕ್ತ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು (Dakshina kannada).
ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಬಾಲಕ ಮೃತಪಟ್ಟಿದ್ದು, ಸಾವಿಗೆ ವೈದ್ಯರ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ಉಡಾಫೆತನ ಕಾರಣ ಎಂದು ಆರೋಪಿಸಿದ ಕುಟುಂಬಸ್ಥರು ದಲಿತ ಸಂಘಟನೆಗಳ ಜೊತೆಯಾಗಿ ಆಸ್ಪತ್ರೆ ಮುಂಭಾಗ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿತ್ತು.
ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನವಿ ಸ್ವೀಕರಿಸಿ ಕಾನೂನು ಕ್ರಮದ ಭರವಸೆ ನೀಡಿದ ಬಳಿಕ ಶವ ಸಂಸ್ಕಾರ ನಡೆದಿದ್ದು, ಘಟನೆ ನಡೆದು ದಿನಗಳುರುಳಿದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ದಲಿತ್ ಸೇವಾ ಸಮಿತಿ, ಅಂಬೇಡ್ಕರ್ ರಕ್ಷಣಾ ವೇದಿಕೆ ಜಂಟಿಯಾಗಿ ಪ್ರತಿಭಟನೆ ನಡೆಸಿ, ಸೂಕ್ತ ನ್ಯಾಯ ಹಾಗೂ ಪರಿಹಾರ ಸಿಗದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯೊಂದಿಗೆ ನಗರ ಠಾಣಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಸೇಸಪ್ಪ ಬೆದ್ರಕಾಡು, ಅಂಬೇಡ್ಕರ್ ರಕ್ಷಣಾ ವೇದಿಕೆಯ ಸುಂದರ ಪಾಟಾಜೆ, ಮಾದಿಗ ದಂಡು ರಾಜ್ಯ ಖಜಾಂಜಿ ಮುನಿರಾಜ್ ಬೆಂಗಳೂರು ಸಹಿತ ದಲಿತ ಮುಖಂಡರುಗಳು, ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: Dakshina Kannada: ವಿದ್ಯಾರ್ಥಿನಿ ಜತೆ ಮಾತನಾಡಿದಕ್ಕೆ ಯುವಕನಿಗೆ ಹಲ್ಲೆ ,ಮೂವರ ಬಂಧನ
