Bengaluru: ದುಷ್ಕರ್ಮಿಗಳು ಕಾಲೇಜು ಯುವಕನ ಮೇಲೆ ಹಲ್ಲೆ ಮಾಡಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೃತ ಯುವಕನನ್ನು ಸುಹೇಲ್ (17) ಎಂದು ಗುರುತಿಸಲಾಗಿದೆ.
ಸುಹೇಲ್ ಬಸವೇಶ್ವರನಗರದ ಮಂಜುನಾಥನಗರ ನಿವಾಸಿ. ಈತ ಮನೆ ಸಮೀಪದಲ್ಲಿಯೇ ಇರುವ ಗೌತಮ್ ಕಾಲೇಜ್’ನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ. ನಿನ್ನೆ ಎಂದಿನಂತೆ ಕಾಲೇಜಿಗೆ ಹೋಗಿದ್ದ ಯುವಕ ಮಧ್ಯಾಹ್ನ ಎರಡೂವರೆ ಗಂಟೆಯ ಹೊತ್ತಿಗೆ ಕಾಲೇಜು ಮುಗಿಸಿಕೊಂಡು ಮನೆಯತ್ತ ಸಾಗುತ್ತಿದ್ದ. ಈ ವೇಳೆ ಬೈಕ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಸುಹೇಲ್ ಜೊತೆ ಜಗಳವಾಡಿ, ಆತನ ಹೊಟ್ಟೆ ಹಾಗೂ ತೊಡೆ ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನು ಕಂಡ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹೇಲ್ ನನ್ನು ಕೂಡಲೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಸುಹೇಲ್ ಸಂಜೆಯ ಹೊತ್ತಿಗೆ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಸವೇಶ್ವರನಗರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಬೈಕ್ ಗಳಲ್ಲಿ ಬಂದ ಹಂತಕರ ಬಗ್ಗೆ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಹಲ್ಲೆಯ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಡ್ಯಾನ್ಸ್ ವೇಳೆ ಸುಹೇಲ್ ಹಾಗೂ ಕೆಲ ಹುಡುಗರ ನಡುವೆ ವಾಗ್ವಾದ, ಕಿರಿಕ್ ಆಗಿತ್ತು. ಹಾಗಾಗಿ ಈ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ಓದಿ: Daily Horoscope: ದೈವ ದರ್ಶನದ ಆಶೀರ್ವಾದ ಕುಟುಂಬದ ಸದಸ್ಯರೊಂದಿಗೆ ಈ ರಾಶಿಯವರಿಗೆ ಇಂದು ಲಭ್ಯ!
